ಸೋಮವಾರ, ಅಕ್ಟೋಬರ್ 7, 2013

ಚಿತ್ತಜನಯ್ಯನ ಚಿಂತಿಸು ಮನವೇ : Chittajanayyana Chintisu Manave

ಚಿತ್ತಜನಯ್ಯನ ಚಿಂತಿಸು ಮನವೇ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ||

ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ ||೧||

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨||

ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||

Labels: ಚಿತ್ತಜನಯ್ಯನ ಚಿಂತಿಸು ಮನವೇ, Chittajanayyana Chintisu Manave, ಶ್ರೀಪಾದರಾಜರು, Sripadarajaru

ಜಗನ್ಮೋಹನನೇ ಕೃಷ್ಣ : Jaganmohanane Krishna

ಜಗನ್ಮೋಹನನೇ ಕೃಷ್ಣ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥

ಒಬ್ಬಳ ಬಸುರಿಂದಲಿ ಬಂದೆ ಮ
ತ್ತೊಬ್ಬಳ ಕೈಯಲಿ ನೀ ಬೆಳೆದೆ
ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ
ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲಿ ಕಲಿತೆಯೊ ರಂಗ             ॥೨॥

ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು
ಜಗದಗಲಕೆ ಬೀಳಲು ಕೆಡಹಿ
ನಗುತ ನಗುತ ಗೋಪಿ ಮೊಲೆಯುಂಡೆ ಇಂಥ
ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ  ॥೩॥

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ   ॥೪॥

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದವ ಬಲಿ ಶಿರದಲಿಟ್ಟೆ ಇಂತ
ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ   ॥೫॥

ನಂಬಿದ ಪ್ರಹ್ಲಾದನು ಸ್ತುತಿಸೆ ನೀ
ಕಂಭವನೊಡೆದು ಬಂದಾಕ್ಷಣದಿ
ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ
ಡಂಬರಾಟವನೆಲ್ಲಿ ಕಲಿತೆಯೊ ರಂಗ  ॥೬॥

ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ
ಬಂದು ದುರ್ವಾಸರು ಶಾಪ ಕೊಡಲು
ಮುಂದಕೆ ಸಾಧನವಹುದೆಂದು ಚಕ್ರವ
ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ  ॥೭॥

ವರಬಲದಿಂದಲಿ ಭಸ್ಮಾಸುರನು
ಹರಣ ಶಿರಡಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ಆ ದೈತ್ಯನ
ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ವಿದುರನ ಮನೆಯೈದಿ
ಆದರದಿ ಪಾಲ ಕುಡಿದುಳಿದುದ ನೀ
ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ  ॥೯॥

ದುರ್ಯೋಧನ ತನ್ನೊಡ್ಡೋಲಗದೊಳು
ಹರಿಯನು ಕರೆಸೆಂದರುಹಲು ಬಂದು
ಧರಣಿಯುಂಗುಷ್ಟದೊಲೊತ್ತುತ ಅವನನು
ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೦॥
ಆ ಸಭೆಯಲ್ಲಿ ಖಳ ದುರ್ಯೋಧನನಾಗ
ಮೋಸದಿ ಕೃಷ್ಣನ ಕಟ್ಟೆನಲು
ಸಾಸಿರರೂಪಿನ ಕೃಷ್ಣನೆಂದೆನಿಸಿದ
ವೇಷವನೆಲ್ಲಿ ಕಲಿತೆಯೊ ರಂಗ   ॥೧೧॥

ಸರ್ಪಬಾಣ ಮೊರೆಯುತ ಬರಲು ಕಂ-
ದರ್ಪ ಪಿತನೆ ಕರುಣದಿ ನೀನು
ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ
ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೨॥

ದ್ರೋಣನ ಸಂಗ್ರಾಮದಿ ಹರಿಚಕ್ರವ
ಮಾಣದೆ ಸೂರ್ಯಗೆ ಮರೆಮಾಡಿ
ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ
ಜಾಣತನವ ನೀನೆಲ್ಲಿ ಕಲಿತೆಯೊ ರಂಗ  ॥೧೩॥

ಆ ಶಿರವಾತನ ತಂದೆಯು ಕರದಲಿ
ಸೂಸುತ ರಕುತವು ಬೀಳಲು ಅದನು
ಬೀಸಿ ಬಿಸಾಡಲು ಅವನ ಶಿರವನಾಗ
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ  ॥೧೪॥

ಅಡಿ ಮೂಲನೆ ಎಂದು ಕರಿರಾಜ ಕರೆಯಲು
ಯಾದವರಾಯ ನೀ ನಗುತಲಿ ಬಂದು
ಆದರದಿಂದ ಗಜೇಂದ್ರನ ಸಲಹಿದೆ
ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ   ॥೧೫॥

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ  ॥೧೬॥

Labels: ಜಗನ್ಮೋಹನನೇ ಕೃಷ್ಣ, Jaganmohanane Krishna, ಪುರಂದರದಾಸರು, Purandaradasaru

ರಂಗನ ನೋಡಿರೆ ರಾಜಕುವರ : Rangana Nodire Rajakuvara

ರಂಗನ ನೋಡಿರೆ ರಾಜಕುವರ

ಕೀರ್ತನಕಾರರು : ಪುರಂದರದಾಸರು

ರಂಗನ ನೋಡಿರೆ ರಾಜಕುವರ ನರ
ಸಿಂಗ ದೇವ ನಮ್ಮ ದೇವಕಿ ಸುತನ ||ಪ||

ಹಮ್ಮಿನ ತಾಯಿತ ತೋಳ ಭಾಪುರಿಯೊ
ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ
ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ
ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ  ||೧||

ಶುಕ್ರವಾರದ ಪೂಜೆಗೊಂಬವನ
ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ
ಘಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸ ಕುಲವೈರಿ ರಾವಣಾಂತಕನ  ||೨||

ಪಾಪವಿನಾಶಿನಿ ಸ್ನಾನವ ಮಾಡಿ
ಪಾಪಗಳೆಲ್ಲವು ಬೇಗಬಿಟ್ಟೋಡಿ
ಈ ಪರಿ ದಿನ ದಿನ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ  ||೩||

Labels: ರಂಗನ ನೋಡಿರೆ ರಾಜಕುವರ, Rangana Nodire Rajakuvara, ಪುರಂದರದಾಸರು, Purandaradasaru

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ : Eravina Sirige Bimmane Beretare

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

ಕೀರ್ತನಕಾರರು : ಪುರಂದರದಾಸರು
ರಾಗ : ಸೌರಾಷ್ಟ್ರ
ತಾಳ : ಅಟ್ಟ

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ
ಕಡೆದರುಂಟೆ ಬೆಣ್ಣೆ ಜೀವವೆ
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ
ಸ್ಥಿರಕಾಲ ಬಾಳ್ವುದೆ ಜೀವವೆ                          ॥ಪ॥

ಸತಿ ಸುತರೆಂದು ನೆಚ್ಚಲು ಬೇಡ ಮನದೊಳು
ಹಿತವರೊಬ್ಬರ ಕಾಣೆ ಜೀವವೆ
ವೃಥಾ ನೀನು ಕೆಡಬೇಡ ಮರಣವು ತಪ್ಪದು
ನಾಥ ದಶಕಂಠಗಾದರು ಜೀವವೆ                    ॥೧॥

ಅಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ
ಸ್ತ್ರೀಸಂಗವು ಬೇಡ ಜೀವವೆ
ಏಸೇಸು ಜನ್ಮಾಂತರ ಕಳೆದುಳಿದರು
ಈ ಸಾವು ತಪ್ಪದು ಜೀವವೆ                           ॥೨॥

ಆನೆ ಕುದುರೆ ಮಂದಿ ಶಾನೆ ಭಂಡಾರವು
ಏನು ಪಡೆದರಿಲ್ಲ ಜೀವವೆ
ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ
ಪುನೀತನಾಗಿರು ಜೀವವೆ                             ॥೩॥

ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು
ಸೆರೆಯ ಬಿಡಿಸಲದು ಪುಣ್ಯ ಜೀವವೆ
ಕರೆಯದೆ ಮನೆಗೆ ಬಂದವರಿಗನ್ನವ ನೀಡು
ಪರಲೋಕ ಸಾಧನವದು ಜೀವವೆ                  ॥೪॥

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು
ಅತ್ತತ್ತಲಿರುವಳು ಜೀವವೆ
ಸತ್ಯವಂತ ಸಿರಿಪುರಂದರವಿಠಲನೆನ್ನು
ಸತ್ತು ಹುಟ್ಟುವುದಿಲ್ಲ ಜೀವವೆ                         ॥೫॥

Labels: ಎರವಿನ ಸಿರಿಗೆ ಬಿಮ್ಮನೆ ಬೆರೆತರೆ, Eravina Sirige Bimmane Beretare, ಪುರಂದರದಾಸರು, Purandaradasaru

ಎಲ್ಲಿ ಮಾಯವಾದನೆ ರಂಗಯ್ಯನು : Elli Mayavadane Rangayyanu

ಎಲ್ಲಿ ಮಾಯವಾದನೆ ರಂಗಯ್ಯನು

ಕೀರ್ತನಕಾರರು : ವ್ಯಾಸರಾಯರು  
ರಾಗ : ಆನಂದ ಭೈರವಿ
ತಾಳ : ಆದಿ

ಎಲ್ಲಿ ಮಾಯವಾದನೆ ರಂಗಯ್ಯನು       ||ಪ||

ಎಲ್ಲಿ ಮಾಯವಾದ ಫುಲನಾಭ ಕೃಷ್ಣ
ಚಲ್ವಗಂಗಳೆಯರು ಹುಡುಕಹೋಗುವ ಬನ್ನಿ  ||ಅ.ಪ||

ಮಂದಗಮನೆಯರೆಲ್ಲ ಕೃಷ್ಣನ ಕೂಡೆ
ಚಂದದಿ ಇದ್ದೆವಲ್ಲ
ಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲ
ಮಂದಮತಿಯು ನಮಗೆ ಬಂದು ಒದಗಿತಲ್ಲ ||೧||

ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆ
ಸರಸವಾಡುತಲಿದ್ದೆವೆ
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿ
ಚರಣ ಸೇವಕರಾದ ತರುಣಿರಿಲ್ಲೆ ಬಿಟ್ಟು     ||೨||

ಭಕ್ತವತ್ಸಲದೇವನು ತನ್ನವರನು
ಅಕ್ಕರಿಂದಲಿ ಪೋರೆವೇನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವ
ಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು      ||೩||

Labels: ಎಲ್ಲಿ ಮಾಯವಾದನೆ ರಂಗಯ್ಯನು, Elli Mayavadane Rangayyanu, ವ್ಯಾಸರಾಯರು, Vyasarayaru

ದುರಿತಗಜ ಪಂಚಾನನ ನರಹರಿಯೆ : Duritagaja Panchanana Narahariye

ದುರಿತಗಜ ಪಂಚಾನನ ನರಹರಿಯೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯೊ ಗೋವಿಂದ    ||ಪ||

ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು
ಬಿಸುಡುವನೆ ಕಾಲುಹೊಳೆಗಳನು ಗೊವಿಂದ   ||೧||

ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ
ಬಂಧನ ಬಿಡಿಸೆನ್ನ ತಂದೆ ಗೋವಿಂದ  ||೨||

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ  ||೩||

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಓಲೈಸಲ್ಯಾಕೆ ಗೋವಿಂದ  ||೪||

ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ  ||೫||

ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ ||೬||

ಮಾನಾಭಿಮಾನದೊಡೆಯ ರಂಗವಿಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ   ||೭||

Labels: ದುರಿತಗಜ ಪಂಚಾನನ ನರಹರಿಯೆ, Duritagaja Panchanana Narahariye, ಶ್ರೀಪಾದರಾಜರು, Sripadarajaru

ಊರದೇವರ ಮಾಡಬೇಕಣ್ಣ : Uradevara Madabekanna

ಊರದೇವರ ಮಾಡಬೇಕಣ್ಣ 

ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯೆ
ತಾಳ : ಅಟ್ಟ

ಊರದೇವರ ಮಾಡಬೇಕಣ್ಣ ತನ್ನೊಳಗೆ ತಾನೆ                               ॥ಪ॥ ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಇರುಳು ಹಗಲು

ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಭ್ರೂಮಧ್ಯದಲ್ಲಿ                            ॥ಅ.ಪ॥

ಎಷ್ಟು ಯುಗಗಳು ತೀರಿ ಹೋಯ್ತಣ್ಣ ದೇವರ ಮಾಡದೆ
ಕಷ್ಟದಿಂದ ನೊಂದೆ ಕಾಣಣ್ಣ
ಅಷ್ಟ ದಳದ ಕಂಭ ನಿಲ್ಲಿಸಿ ಕಟ್ಟಿ ಚಕ್ರಂಗಳನು ಹಾಕಿ
ಸೃಷ್ಟಿದೇವರ ತಂದು ನಿಲ್ಲಿಸಿ ದುಷ್ಟ ಕೋಣನ ಶಿರವ ತರಿದು                ॥೧॥

ಕಷ್ಟಕರ್ತವೆಂಬ ಕುರಿಯಣ್ಣ ಅದನ್ನು ತಂದು
ಕಟ್ಟಿ ತಲೆಯನು ಹೊಡೆಯಬೇಕಣ್ಣ
ಅಷ್ಟಮದದ ಕುರಿಗಳನ್ನು ಕಟ್ಟಿ ತಲೆಯನು ಚಂಡನಾಡಿ
ಅಟ್ಟಿ ತಿರುಗುವ ಕೋಳಿಯನ್ನು ಕುಟ್ಟಿ ಸೂರೆ ಹಾಕುತಲ್ಲಿ                      ॥೨॥

ನಾನು ಎಂಬುವ ಮೇಕೆ ಹೋತಣ್ಣ ಅದಕ್ಕೆ ತಕ್ಕ
ಜ್ಞಾನವೆಂಬುವ ಪೋತರಾಜಣ್ಣ
ಮಾನವೆಂಬ ಚಾಟಿ ಹೊಡೆದು ಹೀನ ಹೋತನ ಸೀಳಿ ಬಿಸುಟು
ಧ್ಯಾನ ಗುಡಿಸಲು ಸೂರೆಗೊಂಡು ತಾನೆ ಬೆಳಗುವ ಜ್ಯೋತಿ ನಿಲ್ಲಿಸಿ       ।೩॥

ನಾಳೆ ನೋಡೋಣ್ಣೆನ್ನಬೇಡಣ್ಣ ಕೇಳಣ್ಣ ನಿನ್ನ
ಬಾಳು ಅಸ್ಥಿರವೆಂದು ತಿಳಿಯಣ್ಣ
ಪಾಳ್ಯಗಾರನಂತೆ ಬಹನು ಬಾಳುವ ಕಾಲದಿ ಯಮನು
ಕೋಳಿ ಪಿಳ್ಳೆಯಾಡುವಾಗ ಹಾಳುಹದ್ದು ಒಯ್ಯುವಂತೆ                        ॥೪॥

ಹೆಂಡಿರು ಮಕ್ಕಳು ಸುಳ್ಳು ಕೇಳಣ್ಣ ನಿನ್ನ
ಮಂಡೆ ತುಂಬ ಬಳಗ ಕಾಣಣ್ಣ
ದಂಡಧಾರಿ ಯಮನು ಬಂದು ಮಂಡೆ ಮೇಲೆ ಹೊಯ್ಯುವಾಗ
ಹೆಂಡಿರು ಮಕ್ಕಳು ನಿನ್ನ ಕಂಡು ಭಂಗಬಿಡಿಸಬಲ್ಲರೇನಣ್ಣ                    ॥೫॥

ಸತ್ತ ಪೆಣವ ನೋಡುವಿಯಲ್ಲ ನೀ ಗಳಿಸಿದಂಥ
ಬುತ್ತಿನೋಡಿ ಉಬ್ಬುವಿಯಲ್ಲೊ
ಮೃತ್ಯುವಿನ ಬಾಯಿಯೊಳಗೆ ತುತ್ತು ಆಗಿ ಹೋಗಬೇಡ
ತೊತ್ತು ಆಗಿ ಗುರುವಿಗೆ ನೀ ಹತ್ತಿ ನೋಡೋ ಗುಡ್ಡವನು                      ॥೬॥

ಮುಂದೆ ಇಂಥ ಜನ್ಮ ಬರದಣ್ಣ ನೋಡಣ್ಣ ನಿನಗೆ
ಮಂದಮತಿಯು ಬೇಡ ಕಾಣಣ್ಣ
ಹಿಂದಿನ ಕಷ್ಟವ ಮರೆದು ಕಾಣಣ್ಣ
ತಂದೆ ಪುರಂದರವಿಠಲನ್ನ ಹೊಂದಲು ನೀ ಮುಕ್ತನಣ್ಣ                        ॥೭॥

Labels: ಊರದೇವರ ಮಾಡಬೇಕಣ್ಣ, Uradevara Madabekanna, ಪುರಂದರದಾಸರು, Purandaradasaru

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ : Anjikinyatakayya Sajjanarige

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ
ಭಯವು ಇನ್ಯಾತಕಯ್ಯ                                  ॥ಪ॥

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ         ॥ಅ.ಪ॥
ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ          ॥೧॥

ರೋಮ ರೋಮಕೆ  ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ           ॥೨॥

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ     ॥೩॥

Labels: ಅಂಜಿಕಿನ್ಯಾತಕಯ್ಯ ಸಜ್ಜನರಿಗೆ, Anjikinyatakayya Sajjanarige, ಪುರಂದರದಾಸರು, Purandaradasaru

ಆವ ರೀತಿಯಿಂದ ನೀಯೆನ್ನ ಪಾಲಿಸೊ : Ava Ritiyinda Niyenna Paliso

ಆವ ರೀತಿಯಿಂದ ನೀಯೆನ್ನ ಪಾಲಿಸೊ

ಕೀರ್ತನಕಾರರು : ವಾದಿರಾಜರು 
ರಾಗ : ಮೋಹನ
ತಾಳ : ರೂಪಕ

ಆವ ರೀತಿಯಿಂದ ನೀಯೆನ್ನ ಪಾಲಿಸೊ
ಶ್ರೀವಿಭು ಹಯವದನ                    ||ಪ||

ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ
ತಾವರೆದಳನಯನ ಹಯವದನ       ||ಅ.ಪ||

ಕಾಮನ ಬಾಧೆಯ ತಡೆಯಲಾರದೆ ಕಂಡ
ಕಾಮಿನಿಯರನೆ ಕೂಡಿ
ನೇಮನಿಷ್ಠೆಯಿಂದ ನಿನ್ನನು ಭಜಿಸದೆ
ಪಾಮರನಾದೆನೊ ಹಯವದನ  ||೧||

ಅಂಗನೆಯರಲ್ಲಿ ಅಧಿಕ ಮೋಹದಿಂದ
ಶೃಂಗಾರಗಳನೆ ಮಾಡಿ
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ
ಭಂಗಕ್ಕೆ ಒಳಗಾದೆನೊ ಹಯವದನ ||೨||

ಹೀನಸಂಗವನೆಲ್ಲ ಹಯಮುಖದೇ-
ವನೆ ವರ್ಜಿಸುವಂತೆ ಮಾಡೊ
ಜ್ಞಾನಿಗಳರಸನೆ ದಯವಿಟ್ಟು ನಿನ್ನನು
ಧ್ಯಾನಿಸುವಂತೆ ಮಾಡೊ ಹಯವದನ ||೩||

Labels: ಆವ ರೀತಿಯಿಂದ ನೀಯೆನ್ನ ಪಾಲಿಸೊ, Ava Ritiyinda Niyenna Paliso, ವಾದಿರಜರು, Vadirajaru

ಅಂಬೆಗಾಲಿಕ್ಕುತಲಿ ಬಂದ ಗೋವಿಂದ : Ambegalikkkutali Banda Govinda

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಅಟ್ಟ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ                 ॥ಪ॥

ಅಂಬುಜನಾಭ ದಯದಿಂದ ಮನೆಗೆ                    ॥ಅ.ಪ॥

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನೆಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನ ತುರಂಗ             ॥೧॥

ಕಣ್ಣಬಿಡುವನು ತನ್ನ ಬೆನ್ನ ತಗ್ಗಿಸುವನು
ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನನ್ನ ಬೆಣ್ಣೆಯಕಳ್ಳ
ಮಾನವ ಬಿಟ್ಟು ಕುದುರೆಯನೇರಿದ                      ॥೨॥

ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು
ನರಮೃಗ ಬಲಿಬಂಧ ಕೊರಳುಗೊಯಿಕ
ಶರಮುರಿದೊರಳೆಳೆದು ನಿರವಾಣಿ ಹಾಯ ಹತ್ತಿ
ಪುರಂದರವಿಠಲ ಮನೆಗೆ ತಾ ಬಂದ                    ॥೩॥

Labels: ಅಂಬೆಗಾಲಿಕ್ಕುತಲಿ ಬಂದ ಗೋವಿಂದ, Ambegalikkkutali Banda Govinda,
ಪುರಂದರದಾಸರು, Purandaradasaru

ಏಕೆ ಚಿಂತಿಸುತಿದ್ದಿ ಕೋತಿ ಮನವೆ : Eke Chintisutiddi Koti Manave

ಏಕೆ ಚಿಂತಿಸುತಿದ್ದಿ ಕೋತಿ ಮನವೆ

ಕೀರ್ತನಕಾರರು : ಪುರಂದರದಾಸರು 
ರಾಗ : ಭೈರವಿ 
ತಾಳ : ಝಂಪೆ 

ಏಕೆ ಚಿಂತಿಸುತಿದ್ದಿ ಕೋತಿ ಮನವೆ                      ।।ಪ॥ 

ಲೋಕನಾಥನ ನೆನೆದು ಸುಖಿಯಾಗು ಮನವೆ       ।।ಅ.ಪ॥ 

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು 
ಕಟ್ಟ ಕಡೆಯಲಿ ಲಯಕೆ ಯಾರ ಚಿಂತೆ 
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ 
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ             ।।೧।।

ನವಿಲಿಂಗೆ ಚಿತ್ರಪತ್ರವನಾರು ಬರೆದವರು 
ಪವಳದಾ ಲತೆಗೆ ಕೆಂಪಿಟ್ಟವರು ಯಾರು 
ಸವಿಮಾತಿನರಗಿಣಿಗೆ ಹಸುರು ಬಳಿದವರಾರು 
ಆವ ಮಾಡಿದವ ನಮ್ಮ ಮರೆತಿಹನೆ ಮರುಳೆ       ।।೨।।

ಬಸಿರೊಳಗೆ ಶಿಶುವನು ಆದಾರು ಸಲಹಿದವರು 
ವಸುಧೆಯನು ಬಸಿರೊಳಿಟ್ಟಿರುವರಾರು 
ಹಸಗೆಡದೆ ನಮ್ಮ ಶ್ರೀಪುರಂದರವಿಠಲನ 
ಬಿಸಜಪಾದವ ನಂಬಿ ಸುಖಿಯಾಗು ಮರುಳೆ         ।।೩।। 

Labels: ಏಕೆ ಚಿಂತಿಸುತಿದ್ದಿ ಕೋತಿ ಮನವೆ, Eke Chintisutiddi Koti Manave, ಪುರಂದರದಾಸರು, Purandaradasaru 

ಕೇಳಲೊಲ್ಲನೆ ಎನ್ನ ಮಾತನು : Kelalollane Enna Matanu

ಕೇಳಲೊಲ್ಲನೆ ಎನ್ನ ಮಾತನು

ಕೀರ್ತನಕಾರರು : ಪುರಂದರದಾಸರು

ಕೇಳಲೊಲ್ಲನೆ ಎನ್ನ ಮಾತನು ರಂಗ   ॥ಪ॥

ಕಾಳಿಯಮರ್ದನ ಕೃಷ್ಣಗೆ
ಪೇಳೆ ಗೋಪ್ಯಮ್ಮ ಬುದ್ಧಿ        ॥ಅ.ಪ॥

ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥

ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ  ॥೨॥

ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಠಲ   ॥೩॥

Labels: ಕೇಳಲೊಲ್ಲನೆ ಎನ್ನ ಮಾತನು, Kelalollane Enna Matanu, ಪುರಂದರದಾಸರು, Purandaradasaru

ವನಜನಯನನ ಮನವ ಮಧುಪ ನಂಬುವರೆ : Vanajanayanana Manava

ವನಜನಯನನ ಮನವ ಮಧುಪ ನಂಬುವರೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆಹರಿ
ತಾಳ : ಝಂಪೆ

ವನಜನಯನನ ಮನವ ಮಧುಪ ನಂಬುವರೆ
ಮನದೆಗೆದ ಮದನಪಿತ ವಿಠಲರೇಯಾ                   ||ಪ||

ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನ
ನೆರೆದು ರತಿಪತಿಯ ಸುಖ ನೆರೆದೋರಿದ
ತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿ
ವಿರಹದುರಿ ತಾನಳವಡರಿ ಸುಡುತಿಹುದು               ||೧||

ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿ
ಬಿಡದೆಯೆಮ್ಮನು ತನ್ನ ವಶಮಾಡಿದ
ಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿ
ಮಡದಿ ತಡೆದಳೊ ಮಧುರೆಯಲಿ ನಲ್ಲನ  ||೨||

ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತು
ಇಂದುಮುಖಿ ನಾರಿಯರ ನೆರೆ ನಂಬಿಸಿ
ನಂದನಂದನ ನಮ್ಮ ಕಾನನದೊಳೀಡ್ಯಾಡಿ
ಇಂದು ಮಧುರೆಯ ನಾರಿಯರ ನೆಚ್ಚಿದ   ||೩||

ಇವನ ವಚನದ ಕಪಟ ತಿಳಿಯಲರಿಯದೆ ನಾವು
ನವ ಹರಿಣಿಯಂತೆ ಮರುಳಾಗಿ ಕೇಳಿ
ವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪ
ಇವನ ಗುಣವರಿಯದೆ ಕಡು ಕರುಣಿ ಎಂಬುವರು ಬರಿದೆ ||೪||

ಪತಿಸುತರ ಭವಬಂಧನಗಳೆಲ್ಲ ಈಡ್ಯಾಡಿ
ಗತಿ ನಮಗೆ ಅವನೆಂದು ಮನಸೋತೆವೋ
ಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದ
ಪತಿಯೊಡನೆ ಸಂಧಾನವೆಂತೊ ಎಲೊ ಮಧುಪ ||೫||

ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿ
ಇರುಳು ಹಗಲು ಜರಿ ಜರಿದಳಲುವೆವು
ಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೊ
ಹರಿ ನಮ್ಮ ನೆರೆದುದಚರಿಯಲ್ಲವೇ ಜಗದಿ ||೬||

ತುಂಗಗುಣ ನಿಲಯ ಅಂಗಜನ ಪಿತನೆಂದು
ರಂಗನಿಗೆ ಮನಸೋತು ಮರುಳಾದೆವೋ
ಹಿಂಗು ಬದುಕುವುದೆಂತೋ ಘೃಂಗ ಮಧುರೆಗೆ ಪೋಗಿ
ರಂಗವಿಠಲನ ತಂದೆಮ್ಮನುಳುಹುವುದೋ ||೭||

Labels: ವನಜನಯನನ ಮನವ ಮಧುಪ ನಂಬುವರೆ, Vanajanayanana Manava, ಶ್ರೀಪಾದರಾಜರು, Sripadarajaru

ಈಸಬೇಕು ಇದ್ದು ಜಯಿಸಬೇಕು : Isabeku Iddu Jayisabeku

ಈಸಬೇಕು ಇದ್ದು ಜಯಿಸಬೇಕು

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ     ||ಪ||

ತಾಮರಸ ಜಲದ೦ತೆ
ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ                                ||೧||

ಗೇರು ಹಣ್ಣಿನಲ್ಲಿ ಬೀಜ
ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ
ಧೀರ ಕೃಷ್ಣನ ಭಕುತರೆಲ್ಲ                               ||೨||

ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗ-
ದೀಶ ಪುರಂದರವಿಠಲನ ನೆನೆದು                    ||೩||

Labels: ಈಸಬೇಕು ಇದ್ದು ಜಯಿಸಬೇಕು, Isabeku Iddu Jayisabeku, ಪುರಂದರದಾಸರು, Purandaradasaru

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ : Ishtu Dayavullavana Yake Barabedendi

ಇಷ್ಟು ದಯವುಳ್ಳವನ

ಕೀರ್ತನಕಾರರು : ವಾದಿರಾಜರು 
ರಾಗ : ಕಲ್ಯಾಣಿ
ತಾಳ : ಆದಿ

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ
ಎಷ್ಟು ನಿರ್ದಯಳೆ ನೀನು                     ||ಪ||

ಮುಟ್ಟುಕೋಪವ ದೂರಬಿಟ್ಟು ಸಂತೋಷದಲಿ
ಕೃಷ್ಣನ ಬಳಿಗೆ ಬಾರೆ                        ||ಅ.ಪ||

ನಿನ್ನಲ್ಲಿ ಭೋಗಲೋಲತೆ ಇಲ್ಲದಿದ್ದರೆ ನಿನಗೆ ಪೂಮಾಲೆಯ ಕೊಡುವನೆ
ಸಣ್ಣ ಕಮಲದಲೈದು ಬಣ್ಣಗಿಳಿಗಳ ಬರೆದ ಸಣ್ಣ ಸೀರೆಯ ಕೊಡುವನೆ
ಕಣ್ಣಿಗೆ ಬೇಕಾದ ಕನಕಮಯ ಕರೆದು ಕೈಯಲಿ ಕೊಡುವನೆ
ಬಿನ್ನಾಣವಾಡುತಲಿ ಬಗೆಬಗೆಯ ಮಾತಿನಲಿ ಬಾಯಿಮುದ್ದನೆ ಕೊಡುವನೆ ಓ ಸಖಿಯೆ ||೧||

ಕಳಿಯಡಿಕೆ ಅಲಗು ಕರ್ಪೂರ ಕಾಚನ ಗುಳಿಗೆ ಕರೆದು ಕೈಯಲಿ ಕೊಡುವನೆ
ಬೆಳದಿಂಗಳಲ್ಲಿ ಶೋಭಿಸುವ ಹೊಂಬಣ್ಣದ ಬಿಳಿಯೆಲೆಯ ನಿನಗೀವನೆ
ತಳಿತ ಮಾವಿನ ಚಿಗುರು ಇರುವ ರುಮಾಲೆಯ ತಲೆಯಲ್ಲಿ ಕಟ್ಟಿ ಬರುವನೆ
ಥಳಿಥಳಿಪ ನವಿಲಗರಿ ಮುತ್ತಿನ ತುರಾಯಿಯಿಟ್ಟು ತರುಣಿ ನಿನ್ನಲಿ ಬರುವನೆ ಓ ಸಖಿಯೆ   ||೨||

ಉರುಟಾಣಿ ಮುತ್ತು ಸರ ಉಚಿತವಾಗಿತ್ತು ನಿನ್ನ ಉರುಟು ಕುಚಗಳ ಪಿಡಿವನೆ
ಕಿರುನಗೆಯ ನಗುತಲಿ ಸರಸವಾಡುತ ನಿನ್ನ ಸೆರಗ ಪಿಡಿದು ಸೆಳೆವನೆ
ಕರಕಮಲದಿಂದಲಿ ಕಿರುಬೆವರು ಒರಸುತ ಕಸ್ತೂರಿಯ ಬೊಟ್ಟಿಡುವನೆ
ಸಿರಿಯರಸ ಹಯವದನ ಕೃಷ್ಣನ ಚರಣಕ್ಕೆ ಶರಣಿಪೊಕ್ಕಿನ್ನು ಸುಖಿಸೆ ಓ ಸಖಿಯೆ    ||೩||

Labels: ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ, Ishtu Dayavullavana Yake Barabedendi, ವಾದಿರಜರು, Vadirajaru