ಮಂಗಳವಾರ, ಜುಲೈ 23, 2013

ರಂಗ ಕೊಳಲನೂದಲಾಗಿ : Ranga Kolalanoodalagi

ರಂಗ ಕೊಳಲನೂದಲಾಗಿ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು 
ರಾಗ : ನೀಲಾಂಬರಿ 
ತಾಳ : ಅಟ್ಟ

ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು 
ಮಂಗಳಮಯವಾಯಿತು                                       ।।ಪ।।

ಧರೆಯ ಜನಂಗಳು ಜೀವ ಚೇತನ ಮರೆದು ಶ್ರೀರಂಗ 
ಧ್ಯಾನಪರರಾದರೊ                                             ।।ಅ. ಪ।।

ಬಾಡಿದ ಬಳ್ಳಿ ಮರ ಗೊನೆವಡಿದು 
ತೀಡುವ ಮಂದಮಾರುತನ ಕೂಡಿ ತೂ 
ಗ್ಯಾಡುವ ವನದ ಫಲದಗೊಂಚಲದಿ 
ಪಾಡಲೊಲ್ಲವಳಿಕುಲಗಳು 
ಹೇಡಿಗೊಂಡವು ಜಾಣಕ್ಕಿ ಗಿಣಿಯು ಮಾ 
ತಾಡದೆ ಕಳೆಗುಂದಿದವು ಕೋಗಿಲೆ 
ಓಡ್ಯಾಟ ವೈರಾಟ ಜರಿದು ಖಗಮೃಗ 
ಗಾಢ ನಿದ್ರಾವಶವಾದವೊ                               ।।೧।।

ಕೆಳಗಿನುದಕ ಉಕ್ಕೇರಿ ಬಂದವು 
ತುಳುಕಿ ಚೆಲ್ಲಾಡಿ ನಿಂತಳು ಯಮುನೆ ಮ್ಯಾಲೆ ಮಾ 
ದೊಡ್ಡಿ ಮೇಘಾಳಿ ಬೋರಿಟ್ಟುವು 
ಕಲ್ಲು ಕರಗಿ ನೀರಾದವೋ 
ನಳಿನ ಚಂಪಕ ನಾಗ ಪುನ್ನಾಗ ಪಾ 
ಟಾಲ ಶಾವಂತಿಗಿ ಕೂಡ ಬಕುಳವು 
ಮಾಲತಿ ಜಾಜಿಯು ಪರಿಮಳಂಗೂಡಿ 
ನೀಲಾಂಗನಂಘ್ರಿಗೆ ಎರಗಿದವೋ                         ।।೨।।

ಕೆಚ್ಚಲಾ ಬಿಗಿದು ತೊರೆದ ಮೊಲೆಯ 
ವತ್ಸದೊಡಲಾಸೆ ಜರಿದೆಳೆಹುಲ್ಲು 
ಕಚ್ಚಿ ಅಲ್ಲಿಗಲ್ಲಿ ನಿಂದವು ತಲೆಯ ಮೇಲೆ 
ಪುಚ್ಛವ ನೆಗಹಿ ನೀಂಟಿಸಿ 
ಅಚ್ಯುತಾನಾಕೃತಿ ನೋಡಲು ಸುರರಿ 
ಗಚ್ಚರವಾಯಿತು ಆವು ಕಂಡಾನಂದ 
ಪೆಚ್ಚಿ ಮುಕುಂದನ ಲೇಲಾವಿನೋದಕ್ಕೆ 
ಮೆಚ್ಚಿ ಕುಸುಮವ ಸುರಿದರೊ                          ।।೩।।

ಮುದ್ದುಮೋಹನನ್ನ ಮಂಜುಳ ಸಂಗೀತ 
ಸದ್ದನಾಲಿಸಿ ಗೋಪಾಂಗನೆರೆಲ್ಲರೂ 
ಬುದ್ಧಿ ಸುರ್ಯಾಡಿದರಂಗಜಶರಕೆ 
ಬಿದ್ದು ಪರವಶರಾದರೊ
ಸಿದ್ಧ ಮುನಿಜನರಿದ್ದ ಸಮಾಧಿಯೊಳೆ 
ದ್ದೆದ್ದು ಕುಣಿದರೆದೆ ತಾವರೆಯ 
ಗದ್ದುಗಿಯರಸನೊಲಿಸಿಕೊಂಡರು 
ಗೆದ್ದರೊ ಭವಸಮುದ್ರವ                                ।।೪।।

ಶ್ರೀ ಮನೋಹರಮೂರ್ತಿ ಗೋಪಾಲನು 
ಆ ಮಧುಕುಂಜವನದಿ ತ್ರಿಭಂಗಿಲಿ 
ಹೇಮಾಂಬರುಟ್ಟು ಗೀರುಗಂಧ ಕಸ್ತೂರಿ 
ನಾಮ ಮುಕುಟ ಕುಂಡಲ ಬೆಳಗೀಲಿ 
ದಾಮ ವನಮಾಲೆ ರತುನಾಭರಣ 
ಸ್ವಾಮಿ ಶ್ರೀ ಪ್ರಸನ್ವೆಂಕಟಕೃಷ್ಣನ 
ನಾಮ ಗುಂಡಕ್ರಿಯ ಮೇಘರಾಗವ ಮಾಡೆ 
ಸಾಮಗಾಯನದಿ ನಮೋ ಎಂದರು                     ।।೫।।

Labels: ರಂಗ ಕೊಳಲನೂದಲಾಗಿ, Ranga Kolalanoodalagi, ಪ್ರಸನ್ನ ವೆಂಕಟದಾಸರು, Prasanna Venkatadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ