ಮಂಗಳವಾರ, ಆಗಸ್ಟ್ 27, 2013

ಆರು ಬಲ್ಲರು ಹರಿ ಹರರ ಮಹಿಮೆಯನು : Aru Ballaru Hari Harara Mahimeyanu

ಆರು ಬಲ್ಲರು ಹರಿ ಹರರ ಮಹಿಮೆಯನು

ಕೀರ್ತನಕಾರರು : ಕನಕದಾಸರು
ರಾಗ :  ಕಾಂಬೋದಿ
ತಾಳ : ಝಂಪೆ


ಆರು ಬಲ್ಲರು ಹರಿ ಹರರ ಮಹಿಮೆಯನು 

ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ                    ।।ಪ॥ 

ಪೌರತ್ರಯವ ಗೆಲುವ ಸಮಯದಲಿ ತಪವಮಾಡಿ
ನಾರಾಯಣಾಸ್ತ್ರವನು ಪಡೆದನೀತ 
ಗೌರಿಮನೋಹರನ ಘನತರಾರ್ಚನೆಗೈದು 
ಚಾರುತರ ಚಕ್ರವನು ಪಡೆದನಾ ಶೌರಿ                          ।।೧।।

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ 
ಗಿಲಕಾಯ್ದನಚ್ಯುತನು ಅನುಗಾಲದಿ 
ಬಲಭುಜನು ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು                      ।।೨।।

ಭೋಗಿಶಯನನು ಆಗಿ ಭೋಗಿಭೂಷಣನಾಗಿ 
ವಾಗೀಶನಾಗಿ ಸೃಷ್ಟಿ ಸ್ಥಿತಿ ಲಯಗಳಿಂಗೆ 
ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ 
ಕಾಗಿನೆಲೆಯಾದಿಕೇಶವನ ಮಹಿಮೆಯನು                      ।।೩।।

Labels: ಆರು ಬಲ್ಲರು ಹರಿ ಹರರ ಮಹಿಮೆಯನು, Aru Ballaru Hari Harara Mahimeyanu, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ