ಬುಧವಾರ, ಸೆಪ್ಟೆಂಬರ್ 4, 2013

ಕೇಶವನೊಲುಮೆಯು ಆಗುವ ತನಕ : Keshavanolumeyu Aguva Tanaka

ಕೇಶವನೊಲುಮೆಯು ಆಗುವ ತನಕ

ಕೀರ್ತನಕಾರರು : ಕನಕದಾಸರು
ರಾಗ : ಧನ್ಯಾಸಿ
ತಾಳ : ಅಟ್ಟ

ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ                   ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು     ||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶವ ಗೊಳಿಸದೆ ಇದ್ದೀತೆ
ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ                        ||೧||

ಜೀವನ ವಶದೊಳು ನಾನಾ ದ್ರವ್ಯವಿರೆ
ದಾನ ಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ                  ।।೨।।


ಸತ್ಯಧರ್ಮಗಳ ನಿತ್ಯವೂ ಬೋಧಿಸೆ 
ತೊತ್ತಿನ ಮನಸಿಗೆ ಸೊಗಸೀತೆ 
ತತ್ವದ ಅರ್ಥವ ವಿಚಿತ್ರದಿ ಪೇಳೆ 
ಕತ್ತೆಯ ಚಿತ್ತಕೆ ಹತ್ತೀತೆ 
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ 
ಮುತ್ತುಕೊಟ್ಟರೆ ಮಾತನಾಡೀತೆ 
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ 
ಅರ್ತಿಯ ತೋರದೆ ಇದ್ದೀತೆ                         ।।೩।।

ನ್ಯಾಯವ ಬಿಟ್ಟನ್ಯಾಯವ ಪೇಳಲು
ನಾಯಿಗೆ ನರಕವು ತಪ್ಪೀತೆ 
ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ 
ಘಾಯವಾಗದೆ ಬಿಟ್ಟೀತೆ 
ತಾಯಿತಂದೆಗಳ ನೋಯಿಸಿದವನಿಗೆ 
ಮಾಯದ ಮರಣವು ತಪ್ಪೀತೆ 
ಮಾಯಾಜಾಲವ ಕಲಿತ ಮನುಜನಿಗೆ 
ಕಾಯ ಕಷ್ಟವ ಬಿಟ್ಟೀತೆ                               ।।೪।।

ಸಾಧು ಸಜ್ಜನರ ನೋಯಿಸಿದ ಮಾಯಾ 
ವಾದಿಗೆ ನರಕವು ತಪ್ಪೀತೆ 
ಬಾಧಿಸಿ ಪರರರ್ಥವ ದೋಚುವವಗೆ 
ವ್ಯಾಧಿಯು ಕಾಡದೆ ಬಿಟ್ಟೀತೆ 
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ 
ಮೋದವೆಂದಿಗು ಆದೀತೆ 
ಕದ್ದು ಒಡಲ ಪೊರೆವವನ ಮನೆಯೊಳು 
ಇದ್ದದ್ದು ಹೋಗದೆ ಉಳಿದೀತೆ                      ।।೫।।

ಅಂಗಜ ವಿಷಯಗಳನು ತೊರೆದಾತಗೆ 
ಅಂಗನೆಯರ ಸುಖ ಸೊಗಸೀತೆ 
ಸಂಗ ದುಃಖಗಳು ಹಿಂಗಿದ ಮನುಜಗೆ 
ಶೃಂಗಾರದ ಬಗೆ ರುಚಿಸೀತೆ 
ಇಂಗಿತವರಿತ ನಿಸ್ಸಂಗಿ ಶರೀರ ವ-
ಜ್ರಾಂಗಿಯಾಗದೆ ತಾನಿದ್ದೀತೆ 
ಮಂಗಳ ಮಹಿಮನ ಅಂಘ್ರಿಯ ಕಾಣದ 
ಮಂಗಗೆ ಮುಕುತಿಯು ದೊರಕೀತೆ               ।।೬।।

ಕರುಣಾಮೃತದಾಭರಣವ ಧರಿಸಿದ 
ಶರಣಗೆ ಸಿರಿಯು ತಪ್ಪೀತೆ
ಶರಣ ಪಾಶದುರವಣೆ ಹರಿದಾತಗೆ 

ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ 

ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ 

ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ                ।।೭।।

Labels: ಕೇಶವನೊಲುಮೆಯು ಆಗುವ ತನಕ, Keshavanolumeyu Aguva Tanaka, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ