ಬುಧವಾರ, ಸೆಪ್ಟೆಂಬರ್ 11, 2013

ಕಲ್ಯಾಣಂ ತುಳಸಿ ಕಲ್ಯಾಣಂ : Kalyanam Tulasi Kalyanam

ಕಲ್ಯಾಣಂ ತುಳಸಿ ಕಲ್ಯಾಣಂ 

ಕೀರ್ತನಕಾರರು : ಪುರಂದರದಾಸರು

ಕಲ್ಯಾಣಂ ತುಳಸಿ ಕಲ್ಯಾಣಂ                      ||ಪ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ                       ||ಅ.ಪ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ
ಮುದ್ದುರಂಗ ಬಂದಲ್ಲಿ ತಾ ನೆಲೆಸಿದನು          ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆಗಳಿಂದ
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು                 ||೨||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪವ ಹಚ್ಚಿ
ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು              ||೩||

ಉತ್ಥಾನ ದ್ವಾದಶಿ ದಿವಸದಿಂದಲಿ ಕೃಷ್ಣ
ಉತ್ತಮ ತುಳಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರವಿಠಲ           ||೪||

Labels: ಕಲ್ಯಾಣಂ ತುಳಸಿ ಕಲ್ಯಾಣಂ, Kalyanam Tulasi Kalyanam, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ