ಬುಧವಾರ, ಸೆಪ್ಟೆಂಬರ್ 11, 2013

ವಂದಿಸುವದಾದಿಯಲಿ ಗಣನಾಥನ : Vandisuvadadiyali Gananathana

ವಂದಿಸುವದಾದಿಯಲಿ ಗಣನಾಥನ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟ
ತಾಳ : ಖಂಡಛಾಪು

ವಂದಿಸುವದಾದಿಯಲಿ ಗಣನಾಥನ                    ||ಪ||

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು         ||ಅ.ಪ||

ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು                ||೧||

ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು               ||೨||

ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ            ||೩||

Labels: ವಂದಿಸುವದಾದಿಯಲಿ ಗಣನಾಥನ, Vandisuvadadiyali Gananathana, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ