ಸೋಮವಾರ, ಸೆಪ್ಟೆಂಬರ್ 9, 2013

ಬೃಂದಾವನವೇ ಮಂದಿರವಾಗಿಹ : Brindavanave Mandiravagiha

ಬೃಂದಾವನವೇ ಮಂದಿರವಾಗಿಹ

ಕೀರ್ತನಕಾರರು : ಪುರಂದರದಾಸರು
ರಾಗ : ಕಾಪಿ

ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ
ನಂದನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ                   ||ಪ||

ತುಳಸಿಯ ವನದಲಿ ಹರಿ ಇಹನೆಂಬುದು ಶ್ರುತಿ ಸಾರುತಿದೇ ಕೇಳಿ
ತುಳಿಸಿಯ ದರುಶನದಿಂದ ದುರಿತಗಳೆಲ್ಲ ಹರಿದು ಪೋಗುವುದು ಕೇಳಿ
ತುಳಸಿಯ ಸ್ಪರ್ಶದಿಂದ ದೇಹಪಾವನವೆಂದು ನೀವೆಲ್ಲ ತಿಳಿದು ಕೇಳಿ
ತುಳಸಿ ಸ್ಮರಣೆ ಮಾದಿ ಸಕಲ ಇಷ್ಟವ ಪಡೆದು ಸುಖದಲ್ಲಿ ಬಾಳಿ                 ||೧||

ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರುಲೋಕ ವಶವಾಗುವುದು
ಮಾಲೆಗಳನ್ನೆ ಕೊರಳಲಿ ಇಟ್ಟ ಮನುಜಗೆ ಮುಕ್ತಿ ಮಾರ್ಗವನು ನೀಡುವುದು
ಕಾಲಕಾಲಗಳಲ್ಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟ್ಟು ಪೋಗುವುದು
ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವಳು                        ||೨||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ಶ್ರೀ ತುಳಸಿ
ಪರಮ ಭಕ್ತರ ಪಾಪಗಳನು ತರಿದು ಪಾವನ ಮಾಡುವಳು ತುಳಸಿ
ಸಿರಿ ಆಯು ಪುತ್ರಾದಿ ಸಂಪತ್ತುಗಳನ್ನು ಇತ್ತು ಹರುಷ ನೀಡುವಳು ತುಳಸಿ
ಪುರಂದರವಿಠಲನ್ನ ಚರಣ ಕಮಲದ ಸ್ಮರಣೆ ಕೊಡುವಳು ತುಳಸಿ             ||೩||

Labels: ಬೃಂದಾವನವೇ ಮಂದಿರವಾಗಿಹ , Brindavanave Mandiravagiha
, ಪುರಂದರದಾಸರು, Purandaradasaru

1 ಕಾಮೆಂಟ್‌: